Feeds:
ಲೇಖನಗಳು
ಟಿಪ್ಪಣಿಗಳು

ಪಂಪ

ಪಂಪ (ಕ್ರಿ.ಶ. ೯೦೨-೯೫೦)

ಕನ್ನಡದ ಆದಿಮಹಾಕವಿ ಪಂಪನ ಹೆಸರು, ಕನ್ನಡ ಸಾಹಿತ್ಯಲೋಕದಲ್ಲಿ ಅಜರಾಮರವಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿನ, ಕ್ರಿ.ಶ. ೧೦ ರಿಂದ ೧೨ರವರಗಿನ ಕಾಲವನ್ನು ಪಂಪ ಯುಗವೆಂದು ವಿದ್ವಾಂಸರು ವಿಂಗಡಿಸಿರುವುದು, ಪಂಪನ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಪಂಪ ಬರೆದ ಎರಡು ಕೃತಿಗಳು ಹಳಗನ್ನಡದ ಕಾವ್ಯ ರಚನೆಯ ಮೇಲೆ ಅತಿ ಹೆಚ್ಚಿನ ಪ್ರಭಾವವನ್ನು ಬೀರಿದವು. ಪುರಾಣ ಮತ್ತು ಇತಿಹಾಸಗಳನ್ನು ಕಾವ್ಯಕ್ಕೆ ಅಳವಡಿಸಿಕೊಳ್ಳುವ ಮಾದರಿಯೊಂದನ್ನು ನಿರ್ಮಿಸಿದವು.ಗದ್ಯ ಮತ್ತು ಪದ್ಯಗಳ ಹಿತವಾದ ಮಿಶ್ರಣವಾದ ಚಂಪೂ ಶೈಲಿಯಲ್ಲಿ ಪಂಪ ರಚಿಸಿರುವ, ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಎಂಬ ಎರಡು ಮೇರು ಕೃತಿಗಳು, ಕನ್ನಡದ ಕಾವ್ಯ ಪರಂಪರೆಯಲ್ಲಿ ಅತ್ಯುನ್ನತ ಶಿಕರಗಳಾಗಿವೆ. ಪಂಪನು ದೇಶೀ ಮತ್ತು ಮಾರ್ಗ ಇವುಗಳನ್ನು ಸೇರಿಸಿಕೊಂಡು ಕೃತಿಯನ್ನು ರಚಿಸಿದನು. ಸಂಸ್ಕೃತ ಸಾಹಿತ್ಯದಂತಿರುವುದು ‘ಮಾರ್ಗ’, ಅಚ್ಚಕನ್ನಡದ ಶೈಲಿಯು ’ದೇಶೀ’ ಎನಿಸಿತ್ತು. ಪಂಪ ರನ್ನ ಹಾಗೂ ಪೊನ್ನ ಈ ಮೂವರನ್ನು ಕನ್ನಡದ ರತ್ನತ್ರ್ಯಯರು ಎಂದು ಗೌರವಿಸುತ್ತಾರೆ.

ಜನನ

ಪಂಪನು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದನು. ಪಂಪನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಲಬ್ಬೆ. ಕ್ರಿ.ಶ.ಸುಮಾರು ೯೩೫ ರಿಂದ ೯೫೫ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸು ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿದ್ದ.

ಪಂಪನ ಪೂರ್ವಜರು ವೆಂಗಿಮಂಡಲದಲ್ಲಿ ವಾಸಿಸುತ್ತಿದ್ದರೆಂದು ಹೇಳುತ್ತಾರೆ. ವೆಂಗಿಮಂಡಲವು  ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವೆ ಇದ್ದ ಪ್ರದೇಶ. ಇದರಲ್ಲಿದ್ದ ಏಳು ಗ್ರಾಮಗಳಲ್ಲಿ ವೆಂಗಿಪಳು ಎಂಬುದು ಪ್ರಸಿದ್ಧ ಅಗ್ರಹಾರ. ಅಲ್ಲಿದ್ದ ಜಮದಗ್ನಿ ಪಂಚಾರ್ಷೇಯ ಪ್ರವರದ ಶ್ರೀವತ್ಸ ಗೋತ್ರಕ್ಕೆ ಸೇರಿದ ಕುಟುಂಬಕ್ಕೆ ಸೇರಿದವನು ಪಂಪ. ಮಾಧವ ಸೋಮಯಾಜಿ ಎಂಬಾತನನ್ನು ಪಂಪನ ಮನೆತನದ ಹಿರಿಯನೆಂದು ಗುರುತಿಸಲಾಗಿದೆ. ಈತ ಪಂಪನ ಮುತ್ತಜ್ಜನ ತಂದೆ. ಮಾಧವ ಸೋಮಯಾಜಿಯ ಮಗ ಅಭಿಮಾನ ಚಂದ್ರ. ಈತ ಈಗಿನ ಗುಂಟೂರು ಸಮೀಪದ ಗುಂಡಿಕಱಕ್ಕೆ ಸೇರಿದ ನಿಡುಗುಂದಿ ಎಂಬ ಅಗ್ರಹಾರದಲ್ಲಿದ್ದ. ಈತ ಪಂಪನ ಮುತ್ತಜ್ಜ. ಅಭಿಮಾನ ಚಂದ್ರನ ಮಗ ಕೊಮರಯ್ಯ. ಈತನ ಕಾಲದಲ್ಲಿ ಈ ಕುಟುಂಬದವರು ಬನವಾಸಿ, ಅಂದರೆ ಕರ್ನಾಟಕದ ಉತ್ತರ ಕನ್ನಡ/ಧಾರವಾಡ ಪ್ರದೇಶಕ್ಕೆ ವಲಸೆ ಬಂದರು. ಕೊಮರಯ್ಯ ಪಂಪನ ಅಜ್ಜ. ಇವನ ಮಗ ಭೀಮಪಯ್ಯ. ಭೀಮಪಯ್ಯನ ಹೆಂಡತಿ ಅಬ್ಬಲಬ್ಬೆಯು, ಅಣ್ಣಿಗೇರಿಯ ಜೋಯಿಸ ಸಿಂಘನ ಮೊಮ್ಮಗಳು. ಪಂಪ ಭೀಮಪಯ್ಯನ ಹಾಗು ಅಬ್ಬಲಬ್ಬೆಯು ಮಗ. ಜಿನವಲ್ಲಭ ಪಂಪನ ತಮ್ಮ. ಪಂಪನ ತಂದೆ ಭೀಮಪ್ಪಯ್ಯ ಯಜ್ಞಯಾಗಾದಿಗಳಲ್ಲಿನ ಹಿಂಸೆಯನ್ನು ವಿರೋಧಿಸಿದ ಜೈನ ಮತವನ್ನು ಸ್ವೀಕರಿಸಿದನು. ದೇವೇಂದ್ರಮುನಿ ಎಂಬಾತ ಪಂಪನ ಗುರು.

ಆಸ್ಥಾನ

ಪಂಪ ಚಾಲುಕ್ಯ ವಂಶದ ರಾಜನಾದ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪ ಅರಿಕೇಸರಿಯ ಯೋಧನಾಗಿ ಅಥವ ದಂಡನಾಯಕನಾಗಿದ್ದ ಎಂಬ ಮಾತು ಇದೆ. ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧ ಮಾಡಬಲ್ಲ ಪಂಪನು ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತ ಉಳ್ಳವನು, ಪ್ರೀತಿಯಿದ್ದವನು. ತನ್ನ ದೇಶಪ್ರೇಮವನ್ನು, “ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ” ಎಂದು ಹೇಳಿಕೊಳ್ಳತ್ತ ಪಂಪ ತನ್ನ ತಾಯ್ನಾಡನ್ನು ಹೊಗಳಿದ್ದಾನೆ.

ಪಂಪನ ತಮ್ಮ ಕುರ್ಕ್ಕ್ಯಾಲ್ ಎಂಬ ಗ್ರಾಮದಲ್ಲಿ ಶಾಸನ ವೊಂದನ್ನು ನೆಡಿಸಿದ್ದಾನೆ.

ಪಂಪನನ್ನು “ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ” ಎಂದು ಪುಣ್ಯಾಸ್ರವದ ಕವಿ ನಾಗರಾಜನೆಂಬುವನ ನುಡಿ ಕನ್ನಡ ಕವಿಗಳು ಪಂಪನಿಗೆ ಸಲ್ಲಿಸಿರುವ ಕಾವ್ಯ ಗೌರವದ ಪ್ರಾತಿನಿಧಿಕ ವಾಣಿಯಾಗಿದೆ. ಅಲ್ಲದೆ ಮುಂದುವರೆದು “ಏಂ ಕಲಿಯೋ, ಸತ್ಕವಿಯೋ? ಕವಿತಾಗುಣಾರ್ಣಭವಂ” ಎಂದು ಕೂಡ ಪಂಪನನ್ನು ಹೊಗಳಿದ್ದಾರೆ.

ಶಿವ ಸ್ತುತಿ

ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ವಮಸ್ಯಾದಿಲಕ್ಷ್ಯಂ
ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಂ
ಭಾವಾತೀತ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ

ಕರ್ಪೂರ ಗೌರಂ ಕರುಣಾವತಾರಂ
ಸಂಸಾರ ಸಾರಂ ಭುಜಗೇಂದ್ರ ಹಾರಂ
ಸದಾ ವಸಂತಂ ಹೃದಯಾರವಿಂದೇ
ಭವಂ ಭವಾನಿ ಸಹಿತಂ ನಮಾಮಿ

ಕರಚರಣ ಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣ ನಯನಜಂ ವಾ ಮಾನಸಂ ವಾಪರಾಧಮ್
ವಿಹಿತ ಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀ ಮಹಾದೇವ ಶಂಭೊ

ಕುವೆಂಪು ಅವರ ಅಖಂಡ ಕರ್ನಾಟಕ

ಕರ್ನಾಟಕ ಏಕೀಕರಣದ ಚಳವಳಿಗೆ ಮೈಸೂರಿನ ಕೊಡುಗೆ ಕಡಿಮೆ ಏನಲ್ಲ. ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಕುವೆಂಪು ಅವರೂ ಕರ್ನಾಟಕ ಏಕೀಕರಣದ ಪರವಾಗಿದ್ದರು. ಅಖಂಡ ಕರ್ನಾಟಕದ ಪ್ರತಿಪಾದಕರಾಗಿದ್ದರು. ಕನ್ನಡಿಗರ ಒಗ್ಗೂಡಿಕೆಯ ಬಗ್ಗೆ ಭಾಷಣ ಮಾಡುತ್ತಿದ್ದರು. ಇದು ಆಗಿನ ಅಧಿಕಾರಸ್ಥರಿಗೆ ಹಿಡಿಸಲಿಲ್ಲ. ಅದಕ್ಕೇ ರಾಜ್ಯ ಸರ್ಕಾರ ಕುವೆಂಪು ಅವರಿಗೆ ನೋಟಿಸ್ ನೀಡಿ, ’ಪ್ರಾಧ್ಯಾಪಕರಾಗಿರುವ ನೀವು ರಾಜಕೀಯ ವಿಷಯ ಕುರಿತು ಹೇಳಿಕೆ ನೀಡಿದ್ದೀರಿ. ಇದಕ್ಕೆ ವಿವರಣೆ ಕೋಡಿ” ಎಂದು ಕೇಳಿತು. ಈ ನೋಟಿಸ್ ಗೆ ಕುವೆಂಪು ಅವರು ಅಖಂಡ ಕರ್ನಾಟಕ ಎಂಬ ಪದ್ಯವನ್ನೇ ಬರೆದು ಕಳಿಸಿದರು.

ಅಖಂಡ ಕರ್ನಾಟಕ
ಅಲ್ತೋ ನಮ್ಮ ಬೂಟಾಟದ ರಾಜಕೀಯ ನಾಟಕ
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ
ಅಖಂಡ ಕರ್ನಾಟಕ
ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ
ನೃಪತುಂಗನೇ ಚಕ್ರವರ್ತಿ
ಪಂಪನಲ್ಲಿ ಮುಖ್ಯಮಂತ್ರಿ
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಶರ
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ

ಕರ್ನಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ

ಎಂದು ಉತ್ತರಿಸಿದ್ದರು. ಇದು ರಾಜಕಾರಣಿಗಳನ್ನು ಇನ್ನಷ್ಟು ಕೆರಳಿಸಿತು. ಕೆ.ಸಿ.ರೆಡ್ಡಿ ಸಚಿವ ಸಂಪುಟದಲ್ಲಿಯೂ ಈ ಬಗ್ಗೆ ಚರ್ಚೆ ಆಯಿತು. ಕುವೆಂಪು ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು. ಆಗ ಕೆ.ಸಿ. ರೆಡ್ಡಿ ಅವರು ನಿಟ್ಟೂರು ಶ್ರೀನಿವಾಸ್ ರಾಯರ ಬಳಿ ಈ ಬಗ್ಗೆ ಚರ್ಚಿಸಿದಾಗ, ರಾಯರು ’ಕುವೆಂಪು ಕೈ ಎತ್ತಿದರೆ ಇಡೀ ಕರ್ನಾಟಕವೇ ಕೈ ಎತ್ತುತ್ತದೆ. ಅದಕ್ಕಾಗಿ ನೋಟಿಸ್ ವಾಪಸ್ಸು ಪಡೆಯುವುದೇ ಉತ್ತಮ’ ಎಂದು ಸಲಹೆ ನೀಡಿದರು.ಇದು ಮೈಸೂರು ಕರ್ನಾಟಕ ಏಕೀಕರಣದ ನನಸಿಗೆ ಶ್ರಮಿಸಿದ ಪರಿ.

ಈ ಮೇಲಿನ ವಿಚಾರವನ್ನು, ೧೯ ನವೆಂಬರ್ ೨೦೧೭ ರ ಪ್ರಜಾವಾಣಿ ಮುಕ್ತಛಂದ ದಲ್ಲಿ ಪ್ರಕಟಿತವಾದ ರವೀಂದ್ರ ಭಟ್ಟ ಅವರ ’ಚಳುವಳಿಗಳ ತವರಿಗೆ ಮತ್ತೆ ಬಂದಿದೆ ಕನ್ನಡದ ತೇರು” ಎಂಬ ಬರಹದಿಂದ ಆಯ್ದುಕೊಂಡಿದ್ದು.

ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಬರುವ ನಾಟಕೀಯತೆ, ಹಾಗು ವಿಶೇಷವಾದ ಪದ್ಯಗಳನ್ನು ಇಲ್ಲಿ ಕೊಡಲಾಗಿದೆ.

ಕುರುಕ್ಷೇತ್ರ ಯುದ್ಧ ಘೋಷಿತವಾಗಿತ್ತು, ದುರ್ಯೋಧನ ಭೀಷ್ಮನನ್ನು ಸೇನಾದಿಪತಿಯನ್ನಾಗಿ ನೇಮಿಸಲು ಹೊರಟಾಗ, ಕರ್ಣ, ಈ ಮುದುಕನಿಗೆ ಏಕೆ ಪಟ್ಟ ಕಟ್ಟುತ್ತೀಯೆ, ಶತ್ರುಗಳ ಬೆನ್ನೆಲುಬನ್ನು ಮುರಿಯಬೇಕಾದರೆ ನನಗೆ ಪಟ್ಟಕಟ್ಟು ಎನ್ನುತ್ತಾನೆ.

ಕಟ್ಟಿದ ಪಟ್ಟಮೆ ಸರವಿಗೆ
ನೆಟ್ಟನೆ ದೊರೆ ಪಿಡಿದ ಬಿಲ್ಲೆ ದಂಟಿಂಗೆಣೆ ಕ
ಣ್ಗೆಟ್ಟ ಮುದುಪಂಗೆ ಪಗೆವರ
ನಿಟ್ಟೆಲ್ವಂ ಮುಱಿವೊಡೆನಗೆ ಪಟ್ಟಂಗಟ್ಟಾ

ಅದಕ್ಕೆ ಹಿರಿಯರಾದ ದ್ರೋಣಾಚಾರ್ಯರು, ಸಿಂಹದ ಮುಪ್ಪೂ ಭೀಷ್ಮರ ಮುಪ್ಪುನ್ನು ಕಡೆಗಣಿಸಲಾಗದು ಏಂಬುದನ್ನು ಈ ಕೆಳಗಿನ ಪದ್ಯದಲ್ಲಿ ತಿಳಿಸುತ್ತಾರೆ.

ಸಿಂಗದ ಮುಪ್ಪುಂ ನೆಗಳ್ದೀ
ಗಾಂಗೇಯರ ಮುಪ್ಪುಮಿಳಿಕೆವಡೆಗುಮೆ ವನಮಾ
ತಂಗಂಗಳಿನಸುಹೃಚ್ಚ ತು
ರಂಗ ಬಲಂಗಳಿನದೆಂತುಮಂಗಾಧಿಪತೀ

ಕುಲಜರನುದ್ಧತರಂ ಭುಜ
ಬಲಯುತರಂ ಹಿತರನೀ ಸಭಾ ಮಧ್ಯದೊಳ
ಗ್ಗಲಿಸಿದ ಮದದಿಂ ನಾಲಗೆ
ಕುಲಮಂ ತುಬ್ಬುವವೊಲುಱದೆ ನೀಂ ಕೆಡೆ ನುಡಿವೈ

ಹಿರಿಯರನ್ನು ಹೇಗೆ ಉದ್ದೇಶಿಸಿ ಮಾತನಾಡಬೇಕೆಂಬುದು ನಿನಗೆ ತಿಳಿದಿಲ್ಲಾ, ನಿನ್ನ ಕುಲ ನಿನ್ನ ನಾಲಿಗೆಯಿಂದ, ಕೆಟ್ಟ ಮಾತುಗಳನ್ನು ಆಡಿಸುತ್ತಿವೆ ಎಂದು ದ್ರೋಣಾಚಾರ್ಯರು ಛೇಡಿಸುತ್ತಾರೆ.

ಅದಕ್ಕೆ ಕರ್ಣ ಕೋಪದಿಂದ

ಕುಲಮನೆ ಮುನ್ನ ಮುಗ್ಗಡಿಪಿರೇಂ ಗಳ ನಿಮ್ಮ ಕುಲಂಗಳಾಂತು ಮಾ
ರ್ಮಲೆವನನಟ್ಟಿ ತಿಂಬುವೆ ಕುಲಂ ಕುಲಮಲ್ತು ಚಲಂ ಕುಲಂಗುಣಂ
ಕುಲಮಭಿಮಾನಮೊಂದೆ ಕುಲಮಣ್ಮುಕುಲಂ ಬಗೆವಾಗಳೀಗಳೀ
ಕಲಹದೊಳಣ್ಣ ನಿಮ್ಮ ಕುಲವಾಕುಲಂ ನಿಮಗುಂಟುಮಾಡುಗುಂ

ಕುಲಕುಲ ಅಂತಾ ಯಾಕೆ ಹೀಗಳೆಯುತ್ತೀರ, ನಿಮ್ಮ ಕುಲ ಶತ್ರುವನ್ನು ಬೆನ್ನಟ್ಟಿ ಕೊಲ್ಲುವುದೇ, ಯಾವುದು ಕುಲ? ಛಲ ಕುಲ, ಅಭಿಮಾನವೆಂಬುದು ಕುಲ, ಧೈರ್ಯ ಕುಲ. ಕುಲ ಕುಲ ಎನ್ನುತ್ತಿರುವ ನಿಮಗೆ ಆ ಕುಲ ನಿಮಗೆ ವ್ಯಾಕುಲವನ್ನು ಉಂಟು ಮಾಡುತ್ತದೆ ಎಂದು ಕರ್ಣ ಕೋಪದಿಂದ ಉತ್ತರಿಸುತ್ತಾನೆ.

ಪಂಪನ ಹೆಸರನ್ನು ಅಜರಾಮರಗೋಳಿಸುವಂತಹ ಈ ಪದ್ಯಗಳು, ನಮ್ಮ ಮಕ್ಕಳಿಗೆ ಪರಚಿತವಾಗಿರಲಿ.

ಶ್ರೀ ವನಿತೆಯರಸನೆ

ನಾವು ಚಿಕ್ಕವರಿದ್ದಾಗ, ಎಷ್ಟೋವೇಳೆ ಕರ್ತೃ ಯಾರೆಂದು ತಿಳಿಯದಿದ್ದರೂ, ಅವರ ಕೃತಿಯ ಕೆಲವು ಪದ್ಯಗಳನ್ನ ಬಾಯಿ ಪಾಠ ಮಾಡುತಿದ್ದುದು ಉಂಟು. ಅಂಥಹ ಪದ್ಯಗಳಲ್ಲಿ ಒಂದು, ಕುಮಾರವ್ಯಾಸ ರಚಿಸಿರುವ ಕರ್ನಾಟಕ ಭಾರತ ಕಥಾಮಂಜರಿ ಅಥವಾ ಗದುಗಿನ ಭಾರತದ ಮೊದಲನೇ ಪದ್ಯವನ್ನು ಇಲ್ಲಿ ಕೊಡಲಾಗಿದೆ.

ಶ್ರೀ ವನಿತೆಯರಸನೆ ವಿಮಲರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಕರದಾತಾರ
ರಾವಣಾಸುರ ಮಥನ ಶ್ರವಣಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಾಯಣ

ದಿನಗಳು
೧. ಪಾಡ್ಯ
೨. ಬಿದಿಗೆ
೩. ತದಿಗೆ
೪. ಚೌತಿ
೫. ಪಂಚಮಿ
೬. ಷಷ್ಠಿ
೭. ಸಪ್ತಮಿ
೮. ಅಷ್ಟಮಿ
೯. ನವಮಿ
೧೦. ದಶಮಿ
೧೧. ಏಕಾದಶಿ
೧೨. ದ್ವಾದಶಿ
೧೩. ತ್ರಯೋದಶಿ
೧೪. ಚತುರ್ದಶಿ
೧೫. ಹುಣ್ಣಿಮೆ/ಅಮಾವಾಸ್ಯೆ

ಚಾಂದ್ರಮಾಸಗಳು
೧. ಚೈತ್ರ
೨. ವೈಶಾಖ
೩. ಜೇಷ್ಠ
೪. ಆಶಾಢ
೫. ಶ್ರಾವಣ
೬. ಭಾದ್ರಪದ
೭. ಆಶ್ವಯುಜ
೮. ಕಾರ್ತಿಕ
೯. ಮಾರ್ಗಶಿರ
೧೦. ಪುಷ್ಯ
೧೧. ಮಾಘ
೧೨. ಫಾಲ್ಗುಣ

ಋತುಗಳು
೧. ವಸಂತ – ಚೈತ್ರ – ವೈಶಾಖ
೨. ಗ್ರೀಷ್ಮ – ಜೇಷ್ಠ – ಆಶಾಢ
೩. ವರ್ಷ – ಶ್ರಾವಣ – ಭಾದ್ರಪದ
೪. ಶರದ್ – ಆಶ್ವಯುಜ – ಕಾರ್ತಿಕ
೫. ಹೇಮಂತ – ಮಾರ್ಗಶಿರ – ಪುಷ್ಯ
೬. ಶಿಶಿರ – ಮಾಘ – ಫಾಲ್ಗುಣ