Archive

Archive for the ‘ಇತರೆ’ Category

ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು

October 7, 2009 balaglobal Leave a comment

ಸಾಹಿತ್ಯ : ಆರ್.ಎನ್. ಜಯಗೋಪಾಲ್
ಸಂಗೀತ : ವಿಜಯಭಾಸ್ಕರ್
ಗಾಯನ : ಬಿ.ಕೆ. ಸುಮಿತ್ರ

ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಚಿಕ್ಕವ್ವ..ಚಿಕ್ಕವ್ವ..ಎನ್ನುತ ತನ್ನಯ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್..ಎನ್ನುತ ಸೇವೆಗೆ ಎಲ್ಲರ ಕರೆದಿತ್ತು
ಅದಕೇಳಿ ನಾ ಮೈಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ..ಮಂಜುಳ ನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

Categories: ಇತರೆ, ಕವನ

ತನು ಕರಗದವರಲ್ಲಿ …

September 22, 2009 balaglobal 2 comments

ಆಕ್ಕ ಮಹಾದೇವಿಯ ವಚನ

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು
ಮನಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
ಹದುಳಿಗರಲ್ಲದವರಲ್ಲಿ ಗಂದಾಕ್ಷತೆಯನೊಲ್ಲೆಯಯ್ಯ ನೀನು
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು
ಭಾವಶುದ್ಧವಿಲ್ಲದವರಲಿ ಧೂಪವನೊಲ್ಲೆಯಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು
ತ್ರಿಕರಣಶುದ್ಧವಿಲ್ಲದವರಲಿ ತಾಂಬೂಲವನೊಲ್ಲೆಯಯ್ಯ ನೀನು
ಹೃದಯಕಮಲ ಅರಳದವರಲಿ ಇರಲೊಲ್ಲೆಯಯ್ಯ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯ

Categories: ಇತರೆ

ಹಾಡೊಂದ ಹಾಡುವೆ ನೀ ಕೇಳು ಮಗುವೆ

September 22, 2009 balaglobal Leave a comment

ಚಿತ್ರ : ನಾಂದಿ
ಗಾಯಕ : ಪಿ.ಬಿ.ಶ್ರೀನಿವಾಸ್

ಹಾಡೊಂದ ಹಾಡುವೆ ನೀ ಕೇಳು ಮಗುವೆ
ಬರಿದಾದ ಮನೆ ಬೆಳಗೆ ನೀನೆಂದು ಬರುವೆ

ಸೀಮಂತದಾನಂದ ನಾ ನೀಡಲಿಲ್ಲ
ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ
ಸಿರಿವಂತರಾ ಭೊಗ ನಿನಗಿಲ್ಲಿ ಇಲ್ಲಾ
ಸಿರಿಯಾಗಿ ನಿಧಿಯಾಗಿ ನೀ ಬರುವೆಯಲ್ಲಾ

||ಹಾಡೊಂದ ಹಾಡುವೆ||

ನಿನ್ನೊಂದು ನುಡಿ ಮುತ್ತು ಸವಿ ಜೇನಿನಂತೆ
ಆ ಸುಖದೆ ನಾ ಮರೆವೆ ಈ ಬಾಳ ಚಿಂತೆ
ಅದ ಕೇಳೊ ಸೌಭಾಗ್ಯ ಈ ತಾಯಿಗಿಲ್ಲಾ
ಇವಳಾಸೆ ಆಕಾಂಕ್ಷೆ ನೀನಾದೆ ಎಲ್ಲಾ

||ಹಾಡೊಂದ ಹಾಡುವೆ||

Categories: ಇತರೆ

ಬದುಕನ್ನು ಕಲಿಯುವ ರೀತಿ

April 8, 2009 balaglobal 6 comments

ನಗರದ ಪ್ರಖ್ಯಾತ ಕಳ್ಳನಿಗೆ ಹೊಸ ಚಿಂತೆಯೊಂದು ಶುರುವಾಯಿತು. ತನ್ನ ಎಳೆಯ ಮಗ ಇನ್ನೂ ಕಳ್ಳತನವನ್ನು ಕಲಿಯುವುದರಲ್ಲಿ ಯಾವ ಆಸಕ್ತಿಯನ್ನೂ ತೋರಿರಲಿಲ್ಲ, ಹೀಗೆ ಮುಂದುವರೆದರೆ ತನ್ನ ಮರಣಾನಂತರ ಮಗ ಹೇಗೆ ಬದುಕಬಲ್ಲ, ಎಂಬ ಚಿಂತೆ ಕಾಡತೊಡಗಿತು.

ಒಂದು ದಿನ ರಾತ್ರಿ, ಕಳ್ಳತನಕ್ಕೆಂದು ಹೊರಡುವ ಮುನ್ನ ಕಳ್ಳ ತನ್ನ ಮಗನನ್ನು ತನ್ನ ಜೊತೆ ಕರೆದುಕೊಂಡು ಹೊರಟ. ನಗರದ ಮಧ್ಯ ಭಾಗದಲ್ಲಿದ್ದ ಸಾಹುಕಾರನೊಬ್ಬನ ಮನೆಯನ್ನು ದೋಚಲು, ಸಾಹುಕಾರನ ಮನೆಯ ಹಿಂಬಾಗದ ಪೊದೆಯಲ್ಲಿ ಅಪ್ಪ ಮಗ ಅವಿತು ಕುಳಿತು ಸರಿಯಾದ ಸಮಯಕ್ಕಾಗಿ ಕಾಯತೊಡಗಿದರು. ರಸ್ತೆಯಲ್ಲಿನ ಸಂಚಾರ ಕಡಿಮೆಯಾಗಿ, ಸಾಹುಕಾರನ ಮನೆಯಲ್ಲಿನ ಎಲ್ಲರೂ ನಿದ್ರೆಯಲ್ಲಿ ಮಲಗಿರುವುದನ್ನು ಖಾತ್ರಿ ಪಡಿಸಿಕೊಂಡ ನಂತರ, ಅಪ್ಪಾ ಮಗ ಇಬ್ಬರೂ ಸೇರಿ, ಮನೆಯ ಹೊರಗಡೆ ಒಂದು ಸಣ್ಣ ಸುರಂಗವನ್ನು ತೋಡಲಾರಂಭಿಸಿದರು. ಬಹಳ ಕಷ್ಟ ಪಟ್ಟು ಸುರಂಗವನ್ನು ಮನೆಯ ಒಳಗೆ ತೆರೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

ಮನೆಯ ಒಳಗೆ, ಚಿನ್ನ, ಬೆಳ್ಳಿ, ವಜ್ರ, ಮುತ್ತು, ಹವಳ, ರಾಶಿ ರಾಶಿ ಬಿದ್ದಿದ್ದವು. ಅಪ್ಪ ತನ್ನ ಕೈಗೆ ಸಿಕ್ಕಿದ್ದಷ್ಟನ್ನು ದೋಚಿ ಕೊಂಡು, ಮೆಲ್ಲಗೆ ಸದ್ದಾಗದ ಹಾಗೆ ಸುರಂಗದ ಬಳಿಗೆ ಬಂದನು. ಮಗ ಇನ್ನು ಕೈಗೆ ಸಿಕ್ಕಿದ್ದನ್ನು ತುಂಬಿಕೊಳ್ಳುವುದರಲ್ಲೇ ಮಗ್ನನಾಗಿದ್ದು, ಅಪ್ಪ ಹೋದದ್ದು ಅವನ ಗಮನಕ್ಕೆ ಬರಲೇ ಇಲ್ಲಾ. ತನ್ನ ಚೀಲ ಎತ್ತಿಕೊಂಡು ಹೊರಡಲು ನೋಡುತ್ತಾನೆ, ಅಪ್ಪ ಅಲ್ಲಿ ಇರಲಿಲ್ಲ. ಅಷ್ಟರಲ್ಲಿ ಹೊರಗಡೆ ತನ್ನ ಅಪ್ಪ ಜೋರಾಗಿ ಕೂಗಿ ಎಲ್ಲರನ್ನು ಏಳಿಸಲು ಪ್ರಯತ್ನಿಸುತಿದ್ದುದನ್ನು ಕೇಳಿ ಮಗನಿಗೆ ತುಂಬಾ ಕೋಪಾ ಬಂತು. ಅದರ ಬಗ್ಗೆ ಏನೂ ಮಾಡುವಂತಿರಲಿಲ್ಲ ವಾದರೂ, ತನ್ನಲ್ಲೇ ಧೈರ್ಯ ತಂದು ಕೊಂಡು ಇಲ್ಲಿಂದ ಪಾರಾಗುವ ಬಗ್ಗೆ ಆಲೋಚಿಸಲಾರಂಭಿಸಿದ.

ಸದ್ದು ಗದ್ದಲದಿಂದ ಎಚ್ಚರ ಗೊಂಡ ಸಾಹುಕಾರ, ಕಳ್ಳನನ್ನು ಹುಡುಕಾಲು ಆರಂಭಿಸಿದ್ದು ಮಗನ ಅರಿವಿಗೆ ಬಂತು. ಮಗ ಸುತ್ತಲೂ ಗಮನಿಸಿದ, ಅಲ್ಲೊಂದು ದೊಡ್ಡ ಖಾಲಿ ಪೆಟ್ಟಿಗೆ ಬಾಯಿ ತೆರೆದಿತ್ತು. ತಟ್ಟನೆ ಹೋಗಿ ಅದರೊಳಗೆ ಕುಳಿತು, ಸದ್ದಾಗದಂತೆ ಮೆಲ್ಲಗೆ ಪೆಟ್ಟಿಗೆಯ ಬಾಯಿ ಮುಚ್ಚಿ ಒಳಗೆ ಸದ್ದು ಮಾಡದೆ ಕುಳಿತ.

ಸಾಹುಕಾರ ಕೈಯಲ್ಲಿ ದೀಪ ಹಿಡಿದು ಕಳ್ಳನನ್ನು ಹುಡುಕುತ್ತಾ ಕೋಣೆಯೊಳಗೆ ಬಂದನು. ಮಗ ಅವಿತಿದ್ದ ಪೆಟ್ಟಿಗೆಯ ಬಾಯಿಯನ್ನು ತೆರೆದನು, ತಕ್ಷಣ ಮಗ ಸಾಹುಕಾರನ ಮೇಲೆ ಆಕ್ರಮಣ ಮಾಡಿ, ದೀಪವನ್ನು ಆರಿಸಿ, ಸುರಂಗದೆಡೆಗೆ ಓಡಿದ. ಸಾಹುಕಾರ ಆತನನ್ನು ಅಟ್ಟಿಸಿಕೊಂಡು ಓಡಿದ. ಮಿಂಚಿನ ವೇಗದಲ್ಲಿ ಓಡಿದ ಮಗ ಸುರಂಗದೊಳಗೆ ಇಳಿದು, ಸುರಂಗದಿಂದ ಹೊರಬಂದ ಮೇಲೆ, ಪಕ್ಕದಲ್ಲಿ ಇದ್ದ ಭಾವಿಯಲ್ಲಿ ದೊಡ್ಡದೊಂದು ಕಲ್ಲನ್ನು ದೂಡಿದ, ಭಾವಿಯಲ್ಲಿ ಬಿದ್ದ ಕಲ್ಲು ದೊಪ್ಪನೆ ಸದ್ದು ಮಾಡಿದ್ದನ್ನು ಕೇಳಿದ ಸಾಹುಕಾರ ಕಳ್ಳ ಭಾವಿಯಲ್ಲಿ ಬಿದ್ದನೆಂದು, ಅಂಥಾ ಆಳವಾದ ಭಾವಿಯಲ್ಲಿ ಬಿದ್ದವನು ಉಸಿರುಗಟ್ಟಿ ಸತ್ತಿರಬೇಕು ಎಂದು ಕೊಂಡು ಮನೆಗೆ ವಾಪಸ್ಸು ಬಂದು ಬಾಗಿಲು ಭದ್ರಮಾಡಿ ಮಲಗಲು ತೆರಳಿದ.

ಮನೆಗೆ ಮರಳಿದ ಮಗನನ್ನು ಕಂಡ ಅಪ್ಪನಿಗೆ ಬಹಳ ಸಂತೋಷವಾಯಿತು. ಆದರೆ ಮಗ ಇನ್ನು ಕೊಪದಲ್ಲೇ ಇದ್ದು, “ನೀನು ಯಾಕೆ ಹಾಗೆ ಕಿರುಚಿ ಕೊಂಡೆ, ನನ್ನನ್ನ ಪೋಲಿಸಿಗೆ ಹಿಡಿದು ಕೊಡಲೆಂದೇ?” ಎಂದು ಕೇಳಿದ.
ಅದಕ್ಕೆ ಅಪ್ಪ, “ಮಗು ನಿನಗೆ ಕಳ್ಳತನವನ್ನು ಕಲಿಸಲು ಹಾಗೆ ಮಾಡಿದೆ, ನಿನಗೆ ಅಭಿನಂದನೆಗಳು, ಇನ್ನು ಮುಂದೆ ನಿನ್ನ ಬಗ್ಗೆ ನನಗೆ ಚಿಂತೆಯಿಲ್ಲ, ನೀನು ನಿನ್ನ ಕಾಲ ಮೇಲೆ ನಿಲ್ಲಬಲ್ಲೆ ಎಂಬ ಭರವಸೆ ಇಂದು ನನಗೆ ಬಂತು” ಎಂದನು.

Categories: ಇತರೆ

ದೇವರು ತಪ್ಪಿಸಿಕೊಂಡಿದ್ದಾನೆ..

December 31, 2008 balaglobal 6 comments

ಇಬ್ಬರು ತುಂಟ ಸಹೋದರರು ತರಲೆ ಮಾಡುವುದರಲ್ಲಿ ಪ್ರಸಿದ್ದಿ. ಊರಿನ ಯಾವುದೇ ತರಲೆ ಕೆಲಸದಲ್ಲಿ ಇಬ್ಬರು ಸಹೋದರರ ಪಾತ್ರವಿದ್ದೆ ಇರುತಿತ್ತು. ಹುಡುಗರ ಅಪ್ಪ ಅಮ್ಮ ಮಕ್ಕಳನ್ನು ಹತೋಟಿಯಲ್ಲಿಡಲು ಮಾಡಿದ ಪ್ರಯತ್ನಗಳೆಲ್ಲಾ ನೀರು ಪಾಲಾಗಿದ್ದವು.

ಹೀಗಿರುವಾಗ ಪಕ್ಕದ ಊರಿಗೆ ಸ್ವಾಮೀಜಿಯೊಬ್ಬರು ಬಂದಿದ್ದು, ಅವರು ಇಂತ ತುಂಟ ಹುಡುಗರಿಗೆ ಬುದ್ದಿ ಕಲಿಸುತ್ತಾರೆಂದು ತಿಳಿದ ಮಕ್ಕಳ ತಾಯಿ, ಸ್ವಾಮೀಜಿಯನ್ನು ನೋಡಲು ಹೋದರು. ಸ್ವಾಮೀಜಿ ತಾಯಿಯ ಮಾತನ್ನೆಲ್ಲ ಕೇಳಿದ ಮೇಲೆ, ತನ್ನ ಬಳಿ ಚಿಕ್ಕ ಮಗನನ್ನು ಕಳುಹಿಸಲು ಹೇಳಿದರು.

ಚಿಕ್ಕ ಹುಡುಗ ಸ್ವಾಮೀಜಿಯನ್ನು ನೋಡಲು ಹೋದ. ಸ್ವಾಮೀಜಿ ಅವನನ್ನು ತನ್ನ ಕೋಣೆಗೆ ಕರೆದುಕೊಂಡು ಹೋದರು. ಅವರ ಕೋಣೆಯಲ್ಲಿ ದೊಡ್ಡದೊಂದು ಮೇಜಿತ್ತು. ಅದರ ಹಿಂದೆ ಸ್ವಾಮೀಜಿ ಕುಳಿತುಕೊಂಡರು. ಕೆಲವು ಕಾಲ ಸ್ವಾಮೀಜಿ ಸುಮ್ಮನಿದ್ದು, ನಂತರ ಹುಡುಗನತ್ತ ಕೈ ಬೊಟ್ಟು ಮಾಡಿ, ದೇವರೆಲ್ಲಿದ್ದಾನೆ? ಎಂದು ಕೇಳಿದರು. ಹುಡುಗ ಏನು ಮಾತಾಡಲಿಲ್ಲ, ಬದಲಾಗಿ ಬೆರಗು ಗಣ್ಣಿನಿಂದ ಮೇಜಿನ ಕೆಳಗೆ ನೋಡಿದ, ಕೋಣೆಯ ಸುತ್ತ ನೋಡಿದ.

ಸ್ವಾಮೀಜಿ ಮತ್ತೆ ಹುಡುಗನತ್ತ ಕೈ ಬೊಟ್ಟು ಮಾಡಿ, ದೇವರೆಲ್ಲಿದ್ದಾನೆ? ಎಂದು ಕೇಳಿದರು. ಹುಡುಗ ಮತ್ತೆ ಅದೇ ಬೆರಗು ಗಣ್ಣಿನಿಂದ ಮೇಜಿನ ಕೆಳಗೆ ನೋಡಿದ, ಕೋಣೆಯ ಸುತ್ತ ನೋಡಿದ. ಏನು ಮಾತಾಡಲಿಲ್ಲ.

ಸ್ವಾಮೀಜಿ ಈ ಬಾರಿ ಹುಡುಗನ ಮೂಗಿನ ಹತ್ತಿರ ತೋರು ಬೆರಳನ್ನು ಕೊಂಡೊಯ್ದು, ತುಸು ಗಡುಸಾದ ದನಿಯಲ್ಲಿ, ದೇವರೆಲ್ಲಿದ್ದಾನೆ? ಎಂದು ಕೇಳಿದರು. ಹೆದರಿಕೆಯಿಂದ ಹುಡುಗ ಸ್ವಾಮೀಜಿ ಕೋಣೆಯಿಂದ ಹೊರಗೆ ಓಡಿದ, ಮನೆ ಸಿಗುವವರೆಗೂ ನಿಲ್ಲಲಿಲ್ಲ.

ಮನೆಗೆ ಹೋದವನು, ಅಣ್ಣನನ್ನು ತಮ್ಮ ರೂಮಿನಲ್ಲಿದ್ದ ಗುಪ್ತ ಜಾಗಕ್ಕೆ ಕರೆದೊಯ್ದ, “ನಾವೀಗ ದೋ…ಡ್ಡ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೀವೆ”. ಅದಕ್ಕೆ ಅಣ್ಣ, “ಯಾವುದೋ ಅದು ದೋ…ಡ್ಡ ತೊಂದರೆ” ಎಂದ.

ಅದಕ್ಕೆ ತಮ್ಮನೆಂದ “ದೇವರು ತಪ್ಪಿಸಿಕೊಂಡಿದ್ದಾನೆ, ಅದಕ್ಕೆ ನಾವು ಕಾರಣವಂತೆ”!!

ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

Categories: ಇತರೆ Tags:

ಮಕ್ಕಳಿಗಾಗಿ ಚಾ ಚಾ ನೆಹರು ಬರೆದ ಪತ್ರ

November 28, 2008 balaglobal Leave a comment

ಚಾಚಾ ನೆಹರೂ ಮಕ್ಕಳಿಗಾಗಿ ಬರೆದ ಪತ್ರವೊಂದರ ಬಗ್ಗೆ ರೂಪಶ್ರೀ ಯವರು ಬರೆದ ಲೇಖನವನ್ನು ಇಲ್ಲಿ ಮರುಪ್ರಕಟಿಸಲಾಗಿದೆ.

ಜವಹರ್ ಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಬಲು ಇಷ್ಟವಂತೆ. ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಸೇರಿಸಿ ಸಂತೋಷಪಡುತ್ತಿದ್ದರಂತೆ. ಮಕ್ಕಳು ಮತ್ತು ಹೂವುಗಳನ್ನು ಹೋಲಿಸುತ್ತಿದ್ದ ನೆಹರು, “ಮಕ್ಕಳೆಂದರೆ ಹೋದೋಟದಲ್ಲಿರುವ ಸುಂದರ ಮೊಗ್ಗುಗಳು” ಎನ್ನುತ್ತಿದ್ದರಂತೆ. ಪುಟ್ಟ ಮಕ್ಕಳ ಕುರಿತು ಕಾಳಜಿ ವಹಿಸಬೇಕು, ಮಕ್ಕಳನ್ನು ಪ್ರೀತಿಯಿಂದ ಪೋಷಿಸಬೇಕು, ಮಕ್ಕಳೇ ದೇಶದ ಭವಿಷ್ಯ ಹಾಗೂ ನಾಳಿನ ನಾಗರಿಕರು ಎಂಬುದು ನೆಹರು ಅಭಿಮತ. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ಅವರ ಜನ್ಮದಿನವನ್ನು ದೇಶದಾದ್ಯಂತ ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಚಾಚಾ ನೆಹರೂ ಅವರು ಮಕ್ಕಳಿಗಾಗಿ ಬರೆದ ಒಂದು ಪತ್ರ ಎಲ್ಲೋ ಓದಿದ್ದೆ, ಅದನ್ನು ನನ್ನ ಕಂಪ್ಯುಟರ್’ನಲ್ಲಿ ಉಳಿಸಿಕೊಂಡಿದ್ದೆ. ಇಲ್ಲಿದೆ ಆ ಪತ್ರ :

ಡಿಸೆಂಬರ್ 03, 1949

ಮುದ್ದು ಪುಟಾಣಿಗಳೇ,
ನನಗೆ ಮಕ್ಕಳೊಂದಿಗೆ ಒಡನಾಟ ಬಲು ಇಷ್ಟ. ಮಕ್ಕಳೊಂದಿಗೆ ಮಾತುಕತೆ, ನಗುನಗುತ್ತಾ ಸಮಯ ಕಳೆಯೋದು, ಆಟವಾಡುವುದು… ನನಗಿಷ್ಟ. ಮಕ್ಕಳ ಜೊತೆಗಿದ್ದರೆ ಒಂದು ಕ್ಷಣ ನಾನೊಬ್ಬ ಇಳಿವಯಸ್ಸಿನವ ಎಂಬುದನ್ನು ಮರೆತೇಬಿಡುತ್ತೇನೆ, ನನ್ನ ಬಾಲ್ಯದ ದಿನಗಳು ಎಂದೋ ಕಳೆದಿವೆ ಎನ್ನುವ ಪರಿವೆಯೂ ಇರುವುದಿಲ್ಲ. ಆದರೆ ಪ್ರೀತಿಯಿಂದ ನಿಮಗೆ ಪತ್ರ ಬರೆಯಲು ಪೆನ್ನು ಹಿಡಿದಾಗ ನನ್ನ ವಯಸ್ಸು, ನಿಮ್ಮ-ನನ್ನ ನಡುವಿನ ಅಂತರ ಹಾಗೂ ನಮ್ಮ ನಡುವಿನ ನಿಜ ವ್ಯತ್ಯಾಸ ಮರೆಯಲಾಗದು. ಕಿರಿಯರಿಗೆ ಉಪದೇಶ ಮತ್ತು ಸಲಹೆ ನೀಡುವುದೇ ಹಿರಿಯರ ಅಭ್ಯಾಸ. ನನಗಿನ್ನೂ ನೆನಪಿದೆ, ಪುಟ್ಟ ಹುಡುಗನಾಗಿದ್ದಾಗ ನನಗೂ ಇಂಥ ಉಪದೇಶಗಳೆಂದರೆ ಕಿರಿಕಿರಿ. ಈಗ ನನ್ನ ಮಾತುಗಳೂ ನಿಮಗೆ ಹಿಡಿಸದೆ ಇರಬಹುದು.ಇತರರ ಮಾತುಗಳನ್ನು ಆಲಿಸಿದಾಗಲೆಲ್ಲಾ ನಾನೊಬ್ಬ ಜ್ಞಾನಿ, ಬುದ್ಧಿವಂತ ಹಾಗೂ ಪ್ರಮುಖ ವ್ಯಕ್ತಿಯಾಗುವ ಕನಸು ಕಾಣುತ್ತಿದ್ದೆ. ಆದರೆ ನನ್ನ ನಿಜ ವ್ಯಕ್ತಿತ್ವದ ಕಡೆ ದೃಷ್ಟಿ ಹರಿಸಿದಾಗೆಲ್ಲಾ ಆ ಬಗ್ಗೆ ಅನುಮಾನ ಮೂಡುತ್ತಿತ್ತು. ಅನೇಕ ಬಾರಿ ಜನರು ಎಷ್ಟೇ ಶ್ರೇಷ್ಠ ಜ್ಞಾನಿಗಳಾಗಿರಲಿ, ತಮ್ಮ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ. ಹಾಗಿದ್ದಲ್ಲಿ ನಾನೇನು ಬರೆಯಲಿ? ಸುತ್ತ ಮುತ್ತಲಿನ ಈ ಅಭೂತಪೂರ್ವ ಸೌಂದರ್ಯ… ಎಲ್ಲವನ್ನೂ ಮರೆಯುವ ನಾವು ಅಥವಾ ನಮ್ಮ ಹಿರಿಯರು ನಮ್ಮದೇ ವಾದ-ವಿವಾದ ಮಂಡಿಸುತ್ತಾ ಕಾಲಹರಣ ಮಾಡಿ ಸ್ವಂತಿಕೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಕಚೇರಿಯಲ್ಲಿ ಕುಳಿತು ಮಹತ್ಕಾರ್ಯ ಮಾಡುತ್ತಿದ್ದೇವೆ ಎಂದುಕೊಳ್ಳುತ್ತೇವೆ.ಆದರೆ ನನಗೆ ಗೊತ್ತು. ನೀವೆಲ್ಲಾ ತುಂಬಾ ಬುದ್ಧಿವಂತರು, ನಿಮ್ಮ ಕಣ್ಣು ಮತ್ತು ಕಿವಿಗಳು ಜಗತ್ತಿನ ಸೌಂದರ್ಯ ಮತ್ತು ಸುತ್ತಲಿನ ಬದುಕನ್ನು ಆಸ್ವಾದಿಸಲು ತೆರೆದೇ ಇರುತ್ತದೆ. ಒಂದು ಸುಂದರ ಹೂವನ್ನು ಅದರ ನಾಮಧೆಯದಿಂದ ಗುರುತಿಸುವಿರಾ ಅಥವಾ ಹಕ್ಕಿಯೊಂದು ಹಾಡುತ್ತಿದ್ದರೆ ಆ ಹಕ್ಕಿಯ ಹೆಸರು ಹೇಳಬಲ್ಲಿರಾ? ಅವುಗಳೊಂದಿಗೆ ಅದೆಷ್ಟು ಸರಳವಾಗಿ ಸ್ನೇಹ ಬೆಳೆಸುತ್ತೀರಿ. ಅಥವಾ ಒಂದಿಷ್ಟು ಪ್ರೀತಿಯಿಂದ ಬಳಿ ಸರಿದರೆ ಸಾಕು ಪ್ರಕೃತಿಯ ಪ್ರತಿ ಜೀವ-ಜಂತುಗಳೂ ನಿಮ್ಮ ಒಡನಾಡಿಯಾಗಬಲ್ಲವು. ಆದರೆ ನಾವು ಹಿರಿಯರು ನಮ್ಮದೇ ಸೀಮಿತ ವಲಯದೊಳಗೆ ಬದುಕು ಸವೆಸುತ್ತೇವೆ. ಹಿರಿಯರು ತಮ್ಮ-ತಮ್ಮೊಳಗೆ ಧರ್ಮ, ಜಾತಿ, ವರ್ಣ, ಪಕ್ಷ, ರಾಷ್ಟ್ರ, ಪ್ರಾಂತ್ಯ, ಭಾಷೆ, ಪದ್ಧತಿ ಮತ್ತು ಬಡವ-ಬಲ್ಲಿದರೆಂಬ ತಡೆಗೋಡೆಗಳನ್ನು ನಿರ್ಮಿಸಿರುತ್ತಾರೆ. ಸ್ವತಃ ತಾವೇ ನಿರ್ಮಿಸಿದ ಕಾರಾಗೃಹದಲ್ಲಿ ಬದುಕು ಸವೆಸುತ್ತಾರೆ. ಅದೃಷ್ಟವಶಾತ್ ಮುಗ್ಧ ಮಕ್ಕಳು ಈ ತಡೆಗೋಡೆಗಳ ಬಗ್ಗೆ ಹೆಚ್ಚೇನೂ ಅರಿಯಲಾರರು. ಅವರು ಜೊತೆಯಾಗಿ ಆಡುತ್ತಾರೆ, ಜೊತೆಯಾಗಿ ನಲಿಯುತ್ತಾರೆ ಮತ್ತು ಕೆಲಸ ಮಾಡುತ್ತಾರೆ. ಆದರೆ ಮಕ್ಕಳು ಬೆಳೆದು ಪ್ರೌಢಾವಸ್ಥೆಗೆ ತಲುಪಿದ ಮೇಲೆ ಈ ತಡೆಗೋಡೆಗಳ ಬಗ್ಗೆ ಕಲಿಯಲಾರಂಭಿಸುತ್ತಾರೆ. ನನಗೊಂದು ನಂಬಿಕೆಯಿದೆ; ನೀವು ಬೆಳೆಯಲು ಇನ್ನೂ ತುಂಬಾ ವರ್ಷಗಳೇ ಬೇಕಾಗಬಹುದು ಎಂಬ ವಿಶ್ವಾಸವದು.ಪುಟಾಣಿಗಳೇ, ನಮ್ಮ-ನಿಮ್ಮ ನಡುವೆ ಒಬ್ಬ ಮಹಾನ್ ವ್ಯಕ್ತಿ ಇದ್ದಾರೆಂಬುವುದು ನಿಮಗೂ ಗೊತ್ತಲ್ಲ? ಅವರೇ ರಾಷ್ಟ್ರಪಿತ ಮಹಾತ್ಮಗಾಂಧಿ. ಇವರನ್ನು ನಾವು ಪ್ರೀತಿಯಿಂದ ಬಾಪೂಜಿ ಎನ್ನುತ್ತೇವೆ. ಅವರೊಬ್ಬ ಮಹಾನ್ ಜ್ಞಾನಿ. ಆದರೆ ಅವರೆಂದೂ ತಮ್ಮ ಬುದ್ದಿವಂತಿಕೆಯನ್ನು ಪ್ರದರ್ಶಿಸಿಲ್ಲ. ಬಲು ಸರಳ ಮತ್ತು ಮಕ್ಕಳಂಥ ಮುಗ್ಧ ಮನಸ್ಸು ಅವರದು. ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ಎಷ್ಟೋ ಬಾರಿ, ನಗುನಗುತ್ತಲೇ ಜಗತ್ತನ್ನು ಎದುರಿಸಲು ಸಿದ್ಧರಾಗಿ ಎಂಬ ನೀತಿಪಾಠವನ್ನು ನಮಗೆ ಬೋಧಿಸುತ್ತಿದ್ದರು.ನಮ್ಮದು ಬೃಹತ್ ರಾಷ್ಟ್ರ, ನಾವೆಲ್ಲರೂ ದೇಶ ಸೇವೆ ಮಾಡಬೇಕು. ನಮ್ಮಲ್ಲಿ ಪ್ರತಿಯೊಬ್ಬರೂ ದೇಶಕ್ಕಾಗಿ ಅಳಿಲು ಸೇವೆ ಮಾಡಿದರೂ ಸಾಕು, ಭಾರತ ಉಜ್ವಲವಾಗಿ ಬೆಳಗಲಿದೆ. ನನ್ನ ಪಕ್ಕದಲ್ಲೇ ಕುಳಿತು ನನ್ನೆಲ್ಲಾ ಮಾತುಗಳನ್ನು ಪ್ರೀತಿಯಿಂದ ಆಲಿಸುತ್ತಿದ್ದೀರೆಂದು ಭಾವಿಸಿ, ಪತ್ರದ ಮೂಲಕ ನನ್ನೆಲ್ಲಾ ಪ್ರೀತಿಯನ್ನು ಅರುಹುತ್ತಿದ್ದೇನೆ. ನಾನು ಹೇಳಬೇಕೆಂದು ಬಯಸಿದ್ದಕ್ಕಿಂತ ಹೆಚ್ಚು ವಿಷಯಗಳನ್ನೇ ಈ ಪತ್ರದಲ್ಲಿ ತುರುಕಿದ್ದೇನೆ.

ಪ್ರೀತಿಯಿಂದ,
ಜವಹರಲಾಲ್ ನೆಹರು

ಅಂದ ಹಾಗೆ ನವೆಂಬರ್ ಇಪ್ಪತ್ತರಂದು ವಿಶ್ವ ಮಕ್ಕಳ ದಿನಾಚರಣೆ. ನಮ್ಮ ಭಾರತದಲ್ಲಿ ಮಾತ್ರ ನವೆಂಬರ್ ಹದಿನಾಲ್ಕು. ಈ ತಿಂಗಳು ಜಗತ್ತಿನ ಎಲ್ಲಾ ಮಕ್ಕಳಿಗೂ ಮಕ್ಕಳಹಬ್ಬದ ಶುಭಾಶಯಗಳು. ಕಲ್ಮಶವರಿಯದ ಮುಗ್ಧ ಮಕ್ಕಳ ನಗು ನಮಗೆಲ್ಲಾ ಚೇತನ. ಈ ನಗು ಮಕ್ಕಳ ಮೊಗದಲ್ಲಿ ಸದಾ ಇರಲಿ.

Categories: ಇತರೆ