Home > ಜನಪದ ಕತೆ-ಗೀತೆಗಳು > ಮಿಂಚಿನ ರಾಣಿ ಕತೆ

ಮಿಂಚಿನ ರಾಣಿ ಕತೆ

ಒಂದು ಊರಿನಲ್ಲಿ ಒಬ್ಬ ರಾಜ ಇದ್ದ. ಆತನಿಗೆ ಒಬ್ಬನೇ ಮಗ. ರಾಜಕುಮಾರ ಮದುವೆಯ ವಯಸ್ಸಿಗೆ ಬಂದಾಗ, ರಾಜ ಮಗನಿಗೆ ಮದುವೆ ಮಾಡಲು ಹೆಣ್ಣು ಹುಡುಕಲಾರಂಭಿಸಿದ. ರಾಜಕುಮಾರ ಯಾವ ಹೆಣ್ಣನ್ನು ನೋಡಿದರು ಏನಾದರೊಂದು ಕೊಂಕು ತೆಗೆದು ಹೆಣ್ಣನ್ನು ತಿರಸ್ಕರಿಸುತಿದ್ದ. ಒಮ್ಮೆ ದೂರ ದೇಶದಿಂದ ಮಂತ್ರಿಯೊಬ್ಬ ರಾಜಕುಮಾರಿಯನ್ನು ತೋರಿಸಲು ಕರೆತಂದರೆ, ರಾಜಕುಮಾರ ಮತ್ತೆ ಕೊಂಕು ಮಾತಾಡಿ ಈ ರಾಜಕುಮಾರಿಯನ್ನು ತಿರಸ್ಕರಿಸುತ್ತಾನೆ. ರಾಜಕುಮಾರನ ನಡವಳಿಕೆಯನ್ನು ಕೇಳಿ ತಿಳಿದಿದ್ದ ಮಂತ್ರಿ, “ನೀನು ಮೆಚ್ಚ ಬಹುದಾದ ಹೆಣ್ಣೆಂದರೆ ಮಿಂಚಿನ ರಾಣಿ ಒಬ್ಬಳೇ, ನೀನು ಆಕೆಯನ್ನು ಯಾಕೆ ಮದುವೆಯಾಗಬಾರದು” ಎಂದು ಹೇಳುತ್ತಾನೆ. ರಾಜಕುಮಾರನ ಕಿವಿ ಚುರುಕಾಗಿ, “ಯಾರು ಈ ಮಿಂಚಿನ ರಾಣಿ?” ಎಂದು ಕೇಳುತ್ತಾನೆ. ಆಗ ಮಂತ್ರಿ ಹೇಳುತ್ತಾನೆ, “ಏಳು ಪರ್ವತಗಳನ್ನು ದಾಟಿ, ಕೊನೆಯ ಪರ್ವತದ ಮೇಲೆ ಸತತ ಮಿಂಚು ಗುಡುಗು ಸಹಿತವಾದ ಮಳೆ ಸದಾ ಸುರಿಯುತ್ತಿರುತ್ತದೆ. ಮಿಂಚಿನೊಳಗೆ ನಿನ್ನ ಕೈ ಹಾಕಿದರೆ, ನಿನಗೊಂದು ದಾರದ ಉಂಡೆ ಸಿಗುತ್ತದೆ. ಹೀಗೆ ಒಂದು ಸೀರೆಗೆ ಬೇಕಾಗುವಷ್ಟು ದಾರದ ಉಂಡೆಗಳನ್ನು ಸಂಗ್ರಹಿಸಿದ ಮೇಲೆ, ಒಂದು ಸೀರೆಯನ್ನು ನೇಯಬೇಕು. ಆಗ ಅ ಸೀರೆಯನ್ನು ಕೇಳಲು ಮಿಂಚಿನ ರಾಣಿ ಬರುತ್ತಾಳೆ. ನನ್ನನ್ನು ಮದುವೆಯಾದರೆ ಮಾತ್ರ ಈ ಸೀರೆ ಕೊಡುವೆ ಎಂದು ಹೇಳು. ಅವಳು ಒಪ್ಪಿ ನಿನ್ನನ್ನು ಮದುವೆಯಾಗುತ್ತಾಳೆ.”

ಅಂದೇ ರಾಜಕುಮಾರ ಬುತ್ತಿಯನ್ನು ಕಟ್ಟಿಕೊಂಡು ಮಿಂಚಿನ ರಾಣಿಯನ್ನು ಮದುವೆಯಾಗಲು ಹೊರಟುಬಿಟ್ಟ. ಹಲವಾರು ದಿನಗಳು ನಡೆದು ಆರು ಪರ್ವತಗಳನ್ನು ಹತ್ತಿ, ಇನ್ನೇನು ಏಳನೇ ಪರ್ವತವನ್ನು ಹತ್ತಲು ಸಜ್ಜಾಗುತಿದ್ದಾಗ ಅಲೊಂದು ಗುಹೆಯಿಂದ ‘ನೀರು ನೀರು’ ಎಂದು ಯಾರೋ ಕರೆಯುತ್ತಿರುವುದು ಕೇಳಿಸಿತು. ಯಾರೋ ಋಷಿಯಿರಬೇಕು ಎಂದು ರಾಜಕುಮಾರ ಗುಹೆಯ ಒಳಗೆ ಹೋಗುತ್ತಾನೆ. ಅಲ್ಲಿ ಒಂದು ದೊಡ್ಡ ಬಂಡೆ, ಮೇಲೊಂದು ಬಿಂದಿಗೆ ಅಷ್ಟೇ ಮತ್ತೇನು ಕಾಣಿಸಲಿಲ್ಲ. ಬಂಡೆಯಿಂದ ‘ನೀರು ನೀರು’ ಎಂಬ ಶಬ್ದ ಬರುತಿತ್ತು. ಯಾರೋ ಮರೆಯಲ್ಲಿ ಅವಿತಿರಬೇಕು, ಅವರಿಗೆ ನೀರು ಬೇಕೇನೋ ಎಂದುಕೊಂಡು ರಾಜಕುಮಾರ ಬಿಂದಿಗೆಯನ್ನು ಹೊತ್ತು ಬಳಿಯಲ್ಲಿದ್ದ ಹೊಂಡದಿಂದ ನೀರನ್ನು ಹೊತ್ತು ತಂದು ಬಂಡೆಯ ಮೇಲೆ ಇರಿಸಿ, ಹೊರಡಲನುವಾದ. ಬಿಂದಿಗೆ ಉರುಳಿ ನೀರು ಬಂಡೆಯ ಮೇಲೆಲ್ಲಾ ಚೆಲ್ಲಿ ಹೋಯಿತು. ರಾಜಕುಮಾರ ಮತ್ತೆ ಬಿಂದಿಗೆಯನ್ನು ಹೊತ್ತು ಹೊಂಡದಿಂದ ನೀರನ್ನು ಮೊಗೆದು ತಂದು ಮತ್ತೆ ಬಂಡೆಯ ಮೇಲೆ ಇರಿಸಿ, ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ, ಮತ್ತೆ ಬಿಂದಿಗೆ ಉರುಳಿ ನೀರು ಬಂಡೆಯ ಮೇಲೆಲ್ಲಾ ಚೆಲ್ಲಿ ಹೋಯಿತು. ಹೀಗೆ ರಾಜಕುಮಾರ ನೂರ ಒಂದು ಬಾರಿ ಮಾಡಿ, ಕೊನೆಯಬಾರಿ ಬಿಂದಿಗೆ ಉರುಳಿದಾಗ, ಅ ಬಂಡೆಗಲ್ಲು ಇದ್ದಲ್ಲಿ ಋಷಿಯೊಬ್ಬ ಎದ್ದು ಬಂದು, ರಾಜಕುಮಾರನನ್ನು ಅಪ್ಪಿಕೊಳ್ಳುತ್ತಾನೆ. ಶಾಪಕ್ಕೆ ಗುರಿಯಾಗಿ ಬಂಡೆಯಾಗಿದ್ದ ಋಷಿ, ನೂರೊಂದು ಬಾರಿ ನೀರಿನ ಸ್ನಾನದಿಂದ ತನ್ನ ಶಾಪ ವಿಮೊಚನೆಯಾಯಿತು ಎಂದು ಹೇಳಿ, “ನನ್ನ ಶಾಪ ವಿಮೋಚನೆಗೆ ಸಹಾಯ ಮಾಡಿದ ನಿನಗೆ ಏನಾದರು ಸಹಾಯ ಮಾಡ ಬೇಕೆನಿಸುತ್ತಿದೆ, ಹೇಳು ನಿನಗೆ ಏನು ಬೇಕು” ಎಂದ ಋಷಿ ಮಾತು ಕೇಳಿ, ರಾಜಕುಮಾರ ತಾನು ಮಿಂಚಿನ ರಾಣಿಯನ್ನು ಮದುವೆಯಾಗಲು ಹೊರಟಿರುವ ವಿಷಯವನ್ನು ತಿಳಿಸುತ್ತಾನೆ. ಆಗ ಋಷಿ, ನಾನೊಂದು ಮುಲಾಮನ್ನು ಕೊಡುತ್ತೇನೆ ಪ್ರತಿಬಾರಿ ನೀನು ಮಿಂಚಿನೊಳಗೆ ಕೈ ಹಾಕುವ ಮೊದಲು ಈ ಮುಲಾಮನ್ನು ಕೈಗೆ ಹಚ್ಚಿಕೋ, ಆಗ ನಿಂಗೆ ಮಿಂಚಿನ ಬಿಸಿ ತಾಕುವುದಿಲ್ಲ, ಎಂದು ಹೇಳಿ ಮಿಂಚಿನ ರಾಣಿಯೊಡನೆ ನಿನ್ನ ಮದುವೆ ನಿರ್ವಿಘ್ನವಾಗಿ ನೆರವೇರಲಿ ಎಂದು ಹಾರೈಸಿ ಹೊರಡುತ್ತಾನೆ.

ಮುಲಾಮನ್ನು ಪಡೆದ ರಾಜಕುಮಾರ ತನ್ನ ಪ್ರಯಾಣ ಮುಂದುವರೆಸುತ್ತಾನೆ. ಕೊನೆಯ ಪರ್ವತದ ತುದಿಯನ್ನೇರಿ, ಮುಲಾಮನ್ನು ತನ್ನ ಕೈಗೆ ಹಚ್ಚಿಕೊಂಡು ಮಿಂಚಿನೊಳಗೆ ಕೈ ಹಾಕಿದಾಗ, ಕೈಗೊಂದು ದಾರದ ಉಂಡೆ ಸಿಕ್ಕಿತು. ಹಲವಾರು ಬಾರಿ ಹೀಗೆ ಮಾಡಿ ಸಾಕಷ್ಟು ದಾರದ ಉಂಡೆ ಸಂಗ್ರಹಿಸಿ, ನಂತರ ಅಲ್ಲಿಯೇ ಇದ್ದ ಮರದ ಸಹಾಯದಿಂದ ಒಂದು ಮಗ್ಗವನ್ನು ತಯಾರಿಸಿ, ಹಗಲು ರಾತ್ರಿ ಮಗ್ಗ ನೇಯ್ದು ಒಂದು ಸುಂದರವಾದ ಸೀರೆಯನ್ನು ತಯಾರಿಸುತ್ತಾನೆ. ಆಗ ಆಗಸದಿಂದ ಮಿಂಚಿನ ರಾಣಿ ಪ್ರತ್ಯಕ್ಷಳಾಗಿ, ಈ ಮೋಹಕವಾದ ಸೀರೆಯನ್ನು ನನಗೆ ಕೊಡುವೆಯಾ ಎಂದು ಕೇಳುತ್ತಾಳೆ. ಆಕೆಯ ರೂಪಕ್ಕೆ ಮರುಳಾದ ರಾಜಕುಮಾರ ‘ನನ್ನನ್ನು ವರಿಸುವುದಾದರೆ ಈ ಸೀರೆ ನಿನ್ನದು’ ಎನ್ನುತ್ತಾನೆ. ಅದಕ್ಕೆ ಒಪ್ಪಿಗೆಯಿತ್ತು ಮಿಂಚಿನ ರಾಣಿ ರಾಜಕುಮಾರನನ್ನು ಮದುವೆಯಾಗುತ್ತಾಳೆ.

  1. July 21, 2009 at 7:00 am | #1

    :) ತುಂಬಾ ದಿನ ಆಗಿತ್ತು, ಮಕ್ಳ ಕಥೆ ಓದಿ

  2. balaglobal
    July 23, 2009 at 8:01 pm | #2

    ಪಾಲ,
    ಧನ್ಯವಾದಗಳು :-)

  3. radha, malur
    August 19, 2009 at 9:55 am | #3

    EE kathe odhi nanage thumba santhosha aaithu. raja kumaranu yava swarthavu illade neeru thumbida adare anireekshithavagi tanu madida sahayakke prathiphala sikkithu idarinda swarthavillade sahaya madi nimage olleyadu endu thilisalu ishtapaduthene

  4. balaglobal
    August 19, 2009 at 12:07 pm | #4

    ರಾಧಾ ಅವರೆ,
    ಮೆಚ್ಚುಗೆಗೆ ಧನ್ಯವಾದಗಳು.

  5. shobha
    September 18, 2009 at 10:06 am | #5

    igga itha kathe namage yaru helolla school nalli teachers hellathaiddru i realy enjoying

  6. balaglobal
    September 18, 2009 at 12:21 pm | #6

    ಶೋಭ ಅವರೆ,
    ಮೆಚ್ಚುಗೆಗೆ ಧನ್ಯವಾದಗಳು.

  7. Gayathri
    October 24, 2009 at 2:28 pm | #7

    Inthaha Kathegallu odhu udhakintha kelalu innu impagiruttade Adare Aa Bhagya nange illa So Odhalu avakasha sikkide Ashte saku Really Nice
    Iam feeling it

  8. balaglobal
    October 24, 2009 at 6:07 pm | #8

    ಗಾಯತ್ರಿಯವರೆ,
    ಮೆಚ್ಚುಗೆಗೆ ಧನ್ಯವಾದಗಳು.

    ಬಾಲ.

  1. No trackbacks yet.